ಚಂದನವನಕ್ಕೆ ಹೊಂಗನಸುಗಳನ್ನು ಹೊತ್ತುಕೊಂಡು ಹಲವಾರು ಪ್ರತಿಭೆಗಳು ಬರುತ್ತಾರೆ. ಅವುಗಳಲ್ಲಿ ಕಲಾದೇವಿಯು ಕೆಲವರನ್ನು ಆರಿಸಿಕೊಳ್ಳುತ್ತಾಳೆ. ಮಂಗಳೂರಿನ ಸ್ಪುರದ್ರೂಪಿ ಹುಡುಗ ನಿರಂಜನ್ ಜಾಲಿಡೇಸ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದಾಗ ಹಿರಿತೆರೆಯ ಅನುಭವ ಇರಲಿಲ್ಲ. ಹಾಗಂತ ನಟನೆ ಬಗ್ಗೆ ಏನು ಗೊತ್ತಿಲ್ಲವೆಂದು ಹೇಳುವಂತಿಲ್ಲ. ನೀನಾಸಂ ತಂಡದಲ್ಲಿ ಗುರುತಿಸಿಕೊಂಡ ನಿರಂಜನ್ ಜೊತೆಜೊತೆಯಲ್ಲಿ ಚಿತ್ರಕಲಾಪರಿಷತ್ಗೆ ಕುಂಚದಲ್ಲಿ ವಿದ್ಯಾಭ್ಯಾಸ ಮಾಡಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್ನಲ್ಲಿ ಪದವಿ ಪಡೆದುಕೊಂಡರು. ಇಲ್ಲಿಯವರೆಗೆ ೩೫ ಬಣ್ಣ ಬಣ್ಣದ ಚಿತ್ರಗಳು ಇವರ ಹಸ್ತದಲ್ಲಿ ಸಿದ್ದಗೊಂಡಿದೆ. ಶಾಲೆಗೆ ಹೋಗುವಾಗಲೆ ಬಣ್ಣದ ಗೀಳು ಹತ್ತಿಸಕೊಂಡ ಇವರಿಗೆ ಪ್ರಾರಂಭದಲ್ಲೆ ಪೋಷಕರಿಂದ ಹಸಿರು ನಿಶಾನೆ ಸಿಕ್ಕಿದ್ದರಿಂದ ಮುಂದಿನ ದಾರಿಗೆ ನಾಂದಿಯಾಯಿತು. ಅಗ್ನಿ ಮತ್ತು ಮಳೆ, ತುಳು ನಾಟಕದಲ್ಲಿ ಇವರ ಪಾತ್ರ ಮಹತ್ವದ್ದು ಆಗಿದೆ. ಇಷ್ಟೆಲ್ಲಾ ಅನುಭವವಿದ್ದರೂ ಮನಸ್ಸಿನಲ್ಲಿ ಅಭಿನಯಿಸಬೇಕೆಂಬ ಹಂಬಲ ಇದ್ದೆ ಇತ್ತು.
ಜಾಲಿಡೇಸ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದ ಎಂ ಡಿ ಶ್ರೀಧರ್ಗೆ ಹಿರಿಯ ಛಾಯಗ್ರಾಹಕ ಸುಂದರನಾಥಸುವರ್ಣ ನಿರಂಜನ್ರನ್ನು ಪರಿಚಯಿಸಿದಾಗ ಅವರು ಒಂದು ಪಾತ್ರಕ್ಕೆ ಹುಡುಗನನ್ನು ತಲಾಷ್ ಮಾಡುತ್ತಿದ್ದರಂತೆ. ಆಗ ಸಿಕ್ಕವರೆ ಕಡಲ ತೀರದ ಕಿನಾರೆ ಹುಡುಗ. ಪ್ರಥಮ ಪ್ರಯತ್ನದಲ್ಲೆ ಸಿಕ್ಸರ್ ಬಾರಿಸಿದರೂ ಏನು ಪ್ರಯೋಜನವಾಗಲಿಲ್ಲ. ಪರವಶರಾಗದ ಇವರು ಆಡ್ ಮೇಕರ್ ಕೆಲಸದ ಮೇಲೆ ಅವ್ಯಾಹತವಾಗಿ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸೌತ್ ಇಂಡಿಯನ್ ಸ್ಟೋರಿ ರೈಟರ್ಸ್ ಅಸೋಸಿಯೇಶನ್ನಲ್ಲಿ ಸದಸ್ಯತ್ವ ಹೊಂದಿದ್ದು ನಿರಂಜನ್ ವಿರಚಿತ ಕಥೆಗಳು ಚಿತ್ರ ಮಾಡಬಹುದಾಗಿದೆ. ಸದ್ಯ ಕೇಸ್ ನಂ.೧೮/೯ ಚಿತ್ರದಲ್ಲಿ ನಾಯಕನಾಗಿ ಎಂಟ್ರಿಕೊಟ್ಟಿರುವ ಇವರು ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಅವರದಾಗಿದೆ. ಬಿಡುಗಡೆಗೆ ಮುಂಚೆ ನಿರ್ಮಾಪಕರು ಇವರ ಕಾಲ್ಶೀಟ್ ಕೇಳಿದ್ದು, ತಹತಹಿಸದೆ ಬಿಡುಗಡೆ ನಂತರ ನೋಡೋಣವೆಂದು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಮತ್ತೋಂದು ತಮಿಳು ಚಿತ್ರದ ರೈಟ್ಸ್ನ್ನು ಪಡೆದುಕೊಂಡು ನಿರ್ಮಾಪಕರನ್ನು ಭೇಟಿ ಮಾಡಿ ನಿರ್ಮಾಣ ಮಾಡಲು ಒಪ್ಪಿಸಿದ್ದಾರೆ. ಚಿತ್ರರಂಗದಲ್ಲಿ ಭದ್ರ ಸ್ಥಾನ ಕಲ್ಪಸಿಕೊಂಡ ನಂತರ ನಿರ್ದೇಶನದ ಕಡೆಗೆ ಹೋಗುವ ಇರಾದೆ ಇವರದು. ಈಗಾಗಲೆ ಗಾಂದಿನಗರದಲ್ಲಿ ಕೇಸ್ ಚಿತ್ರದ ನೋಡಿದ ಸಿನಿಪಂಡಿತರು ನಿರಂಜನ್ಗೆ ಒಳ್ಳೆ ಭವಿಷ್ಯವಿದೆ ಎಂದು ಹೇಳುತ್ತಿರುವುದು ಸಂತಸ ತಂದಿದೆ.